ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭಾ ಕಚೇರಿಯ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಕಂಬಳದ ಜೋಡು ಕೋಣಗಳು ನೋಡುಗರನ್ನು ಸ್ವಾಗತಿಸುತ್ತವೆ. ಮೇಲ್ನೋಟಕ್ಕೆ ಇವು ಜೀವಂತ ಕೋಣಗಳಂತೆಯೇ ಕಂಡರೂ, ವಾಸ್ತವವಾಗಿ ಇವು ಹಳೆಯ ಟೈರ್ ಮತ್ತು ತ್ಯಾಜ್ಯ ವಸ್ತುಗಳನ್ನು ಬಳಸಿ ನಿರ್ಮಿಸಿದ ಅದ್ಭುತ ಕಲಾಕೃತಿಗಳಾಗಿವೆ. ಪರಿಸರ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲು ‘ಕಸದಿಂದ ರಸ’ ಪರಿಕಲ್ಪನೆಯಡಿ ಈ ಕಲಾಕೃತಿಯನ್ನು ಅನಾವರಣಗೊಳಿಸಲಾಗಿದೆ. ವಿದ್ಯಾರ್ಥಿಗಳು, ಯುವಜನತೆ ಮತ್ತು ಸಾರ್ವಜನಿಕರು ತ್ಯಾಜ್ಯವನ್ನು ಕೇವಲ ಕಸವೆಂದು ನಿರ್ಲಕ್ಷಿಸದೆ, ಅದನ್ನೊಂದು ಮರುಬಳಕೆಯ ಸಂಪನ್ಮೂಲವಾಗಿ ನೋಡಬೇಕು ಎಂಬ ಮಹತ್ವದ ದೃಷ್ಟಿಕೋನದಿಂದ ಈ ನೈಜ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ.
ಈ ಸುಂದರ ಕಲಾಕೃತಿಯ ಹಿಂದಿನ ಪ್ರೇರಣೆ ಮತ್ತು ಶ್ರಮ ಅಪಾರವಾಗಿದೆ. ಈ ಹಿಂದೆ ಪುತ್ತೂರು ಪುರಸಭೆಯ ಪೌರಾಯುಕ್ತರಾಗಿದ್ದ ಮಧು ಮನೋಹರ್ ಅವರು ಹೊಸದೆಹಲಿಗೆ ತೆರಳಿದ್ದಾಗ, ಅಲ್ಲಿ ತ್ಯಾಜ್ಯದಲ್ಲಿ ನಿರ್ಮಿಸಲಾಗಿದ್ದ ಸಿಂಹದ ನೈಜ ಗಾತ್ರದ ಕಲಾಕೃತಿಯನ್ನು ನೋಡಿ ಪ್ರೇರಿತರಾಗಿದ್ದರು. ಬಳಿಕ ಪುತ್ತೂರಿನ ಸ್ಥಳೀಯ ಕುಶಲಕರ್ಮಿಗಳ ಜೊತೆ ಚರ್ಚಿಸಿ ಈ ಯೋಜನೆಗೆ ನಾಂದಿ ಹಾಡಿದರು. ಪ್ರಸ್ತುತ ಪೌರಾಯುಕ್ತರಾಗಿರುವ ವಿದ್ಯಾ ಎಂ. ಕಾಳೆ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಕಲಾವಿದ ಸಂದೀಪ್ ನಾಯ್ಕ್ ಅವರ ಕೈಚಳಕದಲ್ಲಿ ಮೂರು ತಿಂಗಳ ಸತತ ಪ್ರಯತ್ನದಿಂದ ಈ ನೈಜ ಕೋಣಗಳ ಪ್ರತಿಕೃತಿಗಳು ಸಿದ್ಧಗೊಂಡಿವೆ.
ಈ ಕಲಾಕೃತಿಯ ನಿರ್ಮಾಣ ಕಾರ್ಯವು ಅತ್ಯಂತ ಕುತೂಹಲಕಾರಿಯಾಗಿದೆ. ಮೊದಲಿಗೆ ಎಂಟು ಎಂಎಂ (8mm) ಕಬ್ಬಿಣದ ರಾಡ್ಗಳಿಂದ ಮೂಲ ವಿನ್ಯಾಸವನ್ನು ರಚಿಸಿ, ಅದರ ಮೇಲೆ ಹಳೆಯ ಟ್ಯೂಬ್ಗಳನ್ನು ಅಳವಡಿಸಲಾಗಿದೆ. ಬಳಿಕ ಹಳೆಯ ಟೈರ್ಗಳನ್ನು ಬೆಲ್ಟ್ ಮಾದರಿಯಲ್ಲಿ ಕತ್ತರಿಸಿ ಅಂಟಿಸಿ, ನೈಜತೆ ಬರುವಂತೆ ಬಣ್ಣ ಬಳಿಯಲಾಗಿದೆ. ಕರಾವಳಿಯ ಪ್ರಸಿದ್ಧ ಕಂಬಳದ ಕೋಣಗಳಾದ ಪಾಂಡು, ರಾಕೆಟ್ ಮೋಡ ಮತ್ತು ಕಿಂಗ್ ತಾಟೆಯ ಅಪ್ರತಿಮ ವೇಗ ಹಾಗೂ ಗಾಂಭೀರ್ಯದಿಂದ ಸ್ಫೂರ್ತಿ ಪಡೆದು ಈ ವಿನ್ಯಾಸ ಮಾಡಲಾಗಿದೆ. ಕಂಬಳದ ನೈಜತೆಯನ್ನು ಕಣ್ಣಿಗೆ ಕಟ್ಟುವಂತೆ ಪ್ರತಿಬಿಂಬಿಸಲು ಸಾಂಪ್ರದಾಯಿಕ ಮರದ ನೊಗ, ಮೂಗುದಾರ, ಪೊಣಕೆ ಬೊಟ್ಟು ಹಾಗೂ ನೆತ್ತಿ ಬಾಲಿನಿಂದ ಕೋಣಗಳನ್ನು ಸಿಂಗರಿಸಲಾಗಿದೆ.
ಕೇವಲ ಕೋಣಗಳು ಮಾತ್ರವಲ್ಲದೆ, ಇಡೀ ಆವರಣವನ್ನೇ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿದೆ. ಕೋಣಗಳನ್ನು ನಿಲ್ಲಿಸಿರುವ ಶೆಡ್ನ ಛಾವಣಿಗೆ ಮರುಬಳಕೆಯ ಪ್ಲಾಸ್ಟಿಕ್ ಹಾಗೂ ಹಂಚುಗಳನ್ನು ಬಳಸಲಾಗಿದೆ. ತ್ಯಾಜ್ಯದಲ್ಲಿ ಅರಳಿದ ಕರಾವಳಿಯ ಮೇರು ಸಂಸ್ಕೃತಿ ಕಂಬಳದ ಕೋಣಗಳು ಎಂಬ ನಾಮಫಲಕವನ್ನು ಸಹ ಇಲ್ಲಿ ಅಳವಡಿಸಲಾಗಿದೆ. ಶೆಡ್ನ ಸುತ್ತಲಿನ ಹೂವಿನ ಕುಂಡಗಳನ್ನೂ ಹಳೆಯ ಟೈರ್ಗಳಿಂದಲೇ ನಿರ್ಮಿಸುವ ಮೂಲಕ ನಗರಸಭಾ ಕಚೇರಿಯ ಅಂದವನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
