ಮಂಡ್ಯದಲ್ಲಿ ಟ್ರಕ್ ಚಾಲಕನ ಮೇಲೆ ನಡೆದ ಫೈರಿಂಗ್ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಂಡ್ಯ ಪೊಲೀಸರ ಕಾರ್ಯವೈಖರಿಯ ಬಗ್ಗೆಯೇ ಸಾರ್ವಜನಿಕರಲ್ಲಿ ಭಾರೀ ಅನುಮಾನ ಮೂಡುವಂತೆ ಮಾಡಿದೆ. ಪ್ರಭಾವಿ ವ್ಯಕ್ತಿಯ ಪುತ್ರನಾಗಿರುವ ಆರೋಪಿ ರೋಹನ್ ಗೌಡನನ್ನು ರಕ್ಷಿಸಲು ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶೋಭಾರಾಣಿ ಅವರೇ ಮುಂದಾಗಿದ್ದಾರಾ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಭೀಕರ ಗುಂಡಿನ ದಾಳಿಯನ್ನು ಕೇವಲ ‘ತಮಾಷೆಗಾಗಿ’ (ಫನ್ ಗಾಗಿ) ಮಾಡಲಾದ ಫೈರಿಂಗ್ ಎಂದು ಎಸ್ಪಿ ಶೋಭಾರಾಣಿ ಅವರು ಲಘುವಾಗಿ ಹೇಳಿಕೆ ನೀಡಿರುವುದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಎಫ್ಐಆರ್ನಲ್ಲಿ ಪ್ರಮುಖ ಸೆಕ್ಷನ್ಗಳೇ ನಾಪತ್ತೆ!
ಈ ಗಂಭೀರ ಕೊಲೆ ಯತ್ನ ಪ್ರಕರಣದ ಎಫ್ಐಆರ್ನಲ್ಲಿ ಉದ್ದೇಶಪೂರ್ವಕವಾಗಿಯೇ ಪ್ರಮುಖ ಹಾಗೂ ಕಠಿಣ ಸೆಕ್ಷನ್ಗಳನ್ನು ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾಮಾನ್ಯ ಜನರಿಗೊಂದು ನ್ಯಾಯ ಹಾಗೂ ಪೊಲೀಸರಿಗೆ ಆತ್ಮೀಯರಾಗಿರುವವರಿಗೊಂದು ನ್ಯಾಯವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಎಫ್ಐಆರ್ ದುರ್ಬಲಗೊಳಿಸಲು ಆರೋಪಿ ಮತ್ತು ಎಸ್ಪಿ ನಡುವಿನ ಆತ್ಮೀಯ ಒಡನಾಟವೇ ಕಾರಣವಾಯ್ತಾ ಎಂಬ ಪ್ರಶ್ನೆಗಳು ಎಲ್ಲೆಡೆ ಎದ್ದಿವೆ.
ಎಸ್ಪಿ ಹಾಗೂ ಆರೋಪಿ ಕುಟುಂಬದ ಆತ್ಮೀಯ ಒಡನಾಟ
ಎಸ್ಪಿ ಶೋಭಾರಾಣಿ ಅವರು ಮಂಡ್ಯಕ್ಕೆ ವರ್ಗಾವಣೆಯಾಗಿ ಬಂದಾಗ ಆರೋಪಿ ರೋಹನ್ ಗೌಡ ಅದ್ದೂರಿಯಾಗಿ ಸ್ವಾಗತ ಕೋರಿದ್ದ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಬಳ್ಳಾರಿಯಿಂದ ಮಂಡ್ಯಕ್ಕೆ ದುಬಾರಿ ‘ವೆಲ್ಫೈರ್’ (Vellfire) ಕಾರಿನಲ್ಲಿ ಎಸ್ಪಿ ಅವರನ್ನು ರೋಹನ್ ಗೌಡನೇ ಕರೆತಂದಿದ್ದ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆರೋಪಿ ಕುಟುಂಬದ ಜೊತೆಗಿನ ಈ ಆತ್ಮೀಯತೆಯಿಂದಾಗಿಯೇ ಪೊಲೀಸರು ಕಾನೂನು ಕ್ರಮ ಕೈಗೊಳ್ಳದೆ ಮೃದು ಧೋರಣೆ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆಯ ಬಗ್ಗೆಯೇ ಅನುಮಾನಗಳು ವ್ಯಕ್ತವಾಗಿವೆ.
