ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ಬಾಳದ ಒಟ್ಟೆಕಾಯರ್ ಗ್ರಾಮದಲ್ಲಿ ಭಾರಿ ಗುಡ್ಡ ಕುಸಿತ ಸಂಭವಿಸಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಗುಡ್ಡದ ಕೆಳಭಾಗದಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ, ಅತ್ಯಂತ ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುವುದೇ ಈ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಈ ಗುಡ್ಡದ ಕೆಳಭಾಗದಲ್ಲಿರುವ ಗೋಡೌನ್ ಜಾಗ ವಿಸ್ತರಣೆಗಾಗಿ ಈ ರೀತಿ ಮಣ್ಣು ಅಗೆಯಲಾಗಿದೆ. ಈ ಗೋಡೌನ್ ಪುತ್ತೂರು ಕಾಂಗ್ರೆಸ್ ಶಾಸಕರಿಗೆ ಸೇರಿದ್ದು ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿವೆ.
ಅಪಾಯದ ಅಂಚಿನಲ್ಲಿ ಕಚ್ಚಾ ತೈಲ ಪೈಪ್ಲೈನ್
ಈ ಗುಡ್ಡ ಕುಸಿತದಿಂದಾಗಿ ದೇಶದ ಅತೀ ದೊಡ್ಡ ತೈಲ ಸಂಗ್ರಹಕಾರವಾದ ಪಾದೂರು ತೈಲ ಸಂಗ್ರಹಕಾರದ ಕಚ್ಚಾ ತೈಲ ಪೈಪ್ಲೈನ್ ಭಾರಿ ಅಪಾಯಕ್ಕೆ ಸಿಲುಕಿದೆ. ಒಟ್ಟೆಕಾಯರ್ ಪ್ರದೇಶದಲ್ಲಿ ಹಾದುಹೋಗಿರುವ ಈ ಪೈಪ್ಲೈನ್ ಕೆಳಭಾಗದಲ್ಲೇ ಅವೈಜ್ಞಾನಿಕವಾಗಿ ಮಣ್ಣು ತೆಗೆಯಲಾಗಿದೆ. ಒಂದು ವೇಳೆ ಮಣ್ಣು ಮತ್ತಷ್ಟು ಸಡಿಲಗೊಂಡು ಈ ಪೈಪ್ಲೈನ್ ಕುಸಿದು ಬಿದ್ದಲ್ಲಿ, ಇಡೀ ಪ್ರದೇಶದಲ್ಲಿ ಊಹಿಸಲಾಗದಷ್ಟು ಭಾರಿ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಭೀತಿಯಿದೆ.
ಕಡಿತಗೊಳ್ಳುವ ಭೀತಿಯಲ್ಲಿ ಗ್ರಾಮದ ಸಂಪರ್ಕ ರಸ್ತೆ
ಗುಡ್ಡ ಕುಸಿತದಿಂದ ಕೇವಲ ತೈಲ ಪೈಪ್ಲೈನ್ ಮಾತ್ರವಲ್ಲದೆ, ಒಟ್ಟೆಕಾಯರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯೂ ಸಂಪೂರ್ಣವಾಗಿ ಅಪಾಯದ ಅಂಚಿನಲ್ಲಿದೆ. ಈ ರಸ್ತೆಯನ್ನು ನಂಬಿಕೊಂಡು ಸುಮಾರು ಎಂಬತ್ತು ಮನೆಗಳ ನಿವಾಸಿಗಳು ನಿತ್ಯ ಸಂಚರಿಸುತ್ತಿದ್ದಾರೆ. ಮಳೆಯಿಂದಾಗಿ ರಸ್ತೆ ಮತ್ತಷ್ಟು ಕುಸಿದರೆ ಇಡೀ ಗ್ರಾಮದ ಸಂಪರ್ಕವೇ ಕಡಿತಗೊಳ್ಳುವ ಆತಂಕವನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ.
ಅಧಿಕಾರಿಗಳು ಹಾಗೂ ಶಾಸಕರ ಭೇಟಿ
ಘಟನೆಯ ಗಂಭೀರತೆ ಅರಿತು ಮಂಗಳೂರು ಉಪ ವಿಭಾಗಾಧಿಕಾರಿ (AC) ಮೀನಾಕ್ಷಿ ಆರ್ಯಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತಂಕಿತ ಗ್ರಾಮಸ್ಥರು ತಮಗೊದಗಿರುವ ಅಪಾಯ ಹಾಗೂ ಅವೈಜ್ಞಾನಿಕ ಕಾಮಗಾರಿಯ ಕುರಿತು ಅಧಿಕಾರಿಗಳ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದರ ಜೊತೆಗೆ, ಮುಲ್ಕಿ-ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಸಹ ಗುಡ್ಡ ಕುಸಿತಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
