ಬಾಲ್ಯದಿ ಕಂಡ ಚಿತ್ರ-ವಿಚಿತ್ರ ಬದುಕಿನ ಹಾದಿಯಲಿ
ಅಳಿಸಲಾಗದ ಒಂದೇ ನೆನಪು ಈ ನಮ್ಮ ‘ಅಪ್ಪು’
ಇಡೀ ನಾಡ ಮೈ ನಡುಗಿಸಿ ಮರೆಯಾದ ಆ ಕರಾಳ ದಿನ
ಬೆರಗಾಗಿ ನಿಂತ ಜನತೆಗೆ ನೀ ನೀಡಿದ ಶಕ್ತಿಯೇ ಒಂದು ವರದಾನ || ೧ ||
ಬಡವ-ಬಲ್ಲವ ಎನ್ನದೆ ಸಮಾನತೆಯ ಮಂತ್ರವ ಸಾರಿದವನು
ತಾನು ಬೆಳೆದು ಪರರ ಬೆಳೆಸುವ ಕಲೆಯನು ಅರಿತವನು
ಮೂರ್ತಿ ಚಿಕ್ಕದಾದರೂ ಕೀರ್ತಿ ಶಿಖರವನ್ನೇರಿದ
ಸಾಹಸಿ ಚಿತ್ರರಂಗದ ಧ್ರುವತಾರೆಯಾಗಿ ಬೆಳಗಿದ ಪ್ರೇಮಪಾಶೀ || ೨ ||
ಸೂರ್ಯನ ಕಿರಣ ಬಿದ್ದಾಗ ವಜ್ರ ಹೊಳೆಯುವ ರೀತಿ
ನಿನ್ನ ಸರಳತೆಯೇ ಜಗಕ್ಕೆ ಸಾರಿತು
ಪ್ರೀತಿಯ ನೀತಿ ಕ್ಷಣಿಕ ಈ ಬದುಕಿನಲಿ
ಅರಿವು ಮೂಡಿಸಿದ ದಾರಿದೀಪ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ ನಿನ್ನ ಈ ರೂಪ || ೩ ||
ಬೆಳೆದು ನಿಂತರೂ ಕುಗ್ಗದ ನಿನ್ನ ಆ ಚೊಕ್ಕ ಮನಸ್ಸು
ನೂರು ಜನರಿಗೆ ಬದುಕ ನೀಡಿದ ಸಾಕಾರದ ಕನಸು
ನಾಣ್ಯದ ಎರಡು ಮುಖದಂತೆ ಬದುಕಿನ ವ್ಯತ್ಯಾಸವ ಅರಿತೆ
ಆಕಾಶ-ಭೂಮಿಯ ನಡುವೆ ಅಚ್ಚಳಿಯದ ಪ್ರೇಮವ ಬರೆದೆ || ೪ ||
ಸತ್ಯಮೇವ ಜಯತೆ ಎಂದೂ ನಿನ್ನ ಬದುಕಿನ ಉಸಿರು
ಚಿಕ್ಕ ಸಸಿ ಹೆಮ್ಮರವಾಗಿ ನೀಡಿತು ನೂರಾರು ಆಸರೆ
ಹತ್ತಿದ ದೀಪವ ಬಿರುಗಾಳಿ ಆರಿಸಿದ ದೈವದ ಆಟ
ವಿಧಿಯ ಅಲೆಗೆ ಬಂಡೆ ಅಪ್ಪಳಿಸಿ ನಿಂತಿತು ಬದುಕಿನ ಪಾಠ || ೫ ||
ಸಣ್ಣವರಿಂದ ದೊಡ್ಡವರವರೆಗೂ ಸವಿನೆನಪಿನ ಹೂಮಳೆ
ನಿನ್ನ ನಗುವಿಲ್ಲದೆ ಬರಿದಾಯಿತಲ್ಲಾ ಈ ಬಣ್ಣದ ಶಾಲೆ
‘ಪವರ್’ ಎಂಬ ಪದಕ್ಕೆ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದೆ
ಕಾಣದ ಲೋಕಕ್ಕೆ ಹಾರಿ ಹೋಗಿ ನಕ್ಷತ್ರವಾಗಿ ಅರಳಿದೆ || ೬ ||
ಕವನ ರಚನೆ:
ಕರಬಸಪ್ಪ ಆರ್. ನಾಗಮ್ಮನವರ, (ಸದಸ್ಯರು) ಸಾ|| ಅಗಡಿ, ತಾ|| ಜಿ|| ಹಾವೇರಿ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ), ರಾಜ್ಯ ಘಟಕ ಮಂಡ್ಯ

